ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ
ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ. ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ ಆಡೂ ಆ ದಾರಿಯಲ್ಲಿ ಹೋಯಿತ್ತೆನಬಹುದೆ ? ಸಂಗನ ಶರಣರಿಗೆ ಆನು ಸರಿಯೆಂದು ಗಳಹಲುಬಹುದೆ ? ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೇ ಹೇಳಾ ಲಿಂಗದೇವಾ ಆನೆ ಬೃಹದಾಕಾರದ ಪ್ರಾಣಿ. ಅದು ನಡೆದ ಜಾಗದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲ್ಲು, ಚಿಕ್ಕಪುಟ್ಟ ಗಿಡಗಳು ಇರುವ ಕಡೆ ಆನೆ ಹೋದರೆ ಅದು ತನ್ನ ಸೊಂಡಿಲಿನಿಂದ ತನಗೆ ಅಡ್ಡ ಬಂದ ಗಿಡ-ಮರ ಟೊಂಗೆಗಳನ್ನು ಕಿತ್ತಿ ಎಸೆಯುತ್ತದೆ. ಹೀಗೆ ಒಂದು ಸಲ ಆನೆಯು ಹೋಗುವ ದಾರಿಯು ಎಷ್ಟೇ ಇಕ್ಕಟ್ಟಾಗಿದ್ದರೂ ಅಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಆ ದಾರಿಯಲ್ಲಿ ಇತರ ಆಡಿನಂತಹ ಸಣ್ಣ ಪುಟ್ಟ ಪ್ರಾಣಿಗಳು ಯಾವುದೇ ತೊಂದರೆ ಇಲ್ಲದೆ ಸಾಗಬಹುದು. ಅದೇ ರೀತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಜಿಡ್ಡುಗಟ್ಟಿದ ಸಂಪ್ರದಾಯದಲ್ಲಿ ಆನೆಯಂತೆ ಮುನ್ನುಗ್ಗಿ ಅನೇಕ ಮೂಢನಂಬಿಕೆಗಳು, ತಪ್ಪು ಆಚರಣೆಗಳೆಂಬ ಗಿಡ ಮರಗಳನ್ನು ಕಿತ್ತೆಸೆದು ನವ ಪಥವನ್ನು ನಿರ್ಮಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದಿನ ದಿನಗಳನ್ನು ನೋಡಿದರೆ ಅಂದು ಬಸವಣ್ಣನವರು ಎಂದರೆ ಯಾರು? ವಚನಗಳೆಂದರೇನು? ಬಸವ ತತ್ತ್ವ, ಲಿಂಗಾಯತ ಧರ್ಮ, ಬಸವ ಧರ್ಮ ಎನ್ನುವ ಶಬ್ದಗಳು ಸಂಪೂರ್ಣವಾಗಿ ಮರೆಮಾಚಿ ಹೋದಾಗ ಮತ್ತೊಮ್ಮೆ 12ನೆಯ ಶತಮಾನದ ಭವ್ಯತೆ ದಿವ್ಯತೆಯನ್ನು ಭಾರತ ದೇಶದಲ್ಲಿ ಪ್ರತಿಷ್ಠಾಪಿಸಿದ ಮೊಟ್ಟಮೊ...